ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಸಂಶೋಧನೆಗೆ 20 ಎಕರೆ ಜಮೀನು ನೀಡಲು ಸಿದ್ಧ-ಸಚಿವ ಶಿವಾನಂದ ಪಾಟೀಲ


ವಿಜಯಪುರ ಜಿಲ್ಲೆಯನ್ನು ಒಣದ್ರಾಕ್ಷಿ ಹಬ್ ಮಾಡಿ, ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆ ವಿಷಯವಾಗಿ ಸಂಶೋಧನೆ ನಡೆಸಲು ಮುಂದಾದಲ್ಲಿ ವಿಜಯಪುರದಲ್ಲಿ ಎಪಿಎಂಸಿ ಮೂಲಕ 20 ಎಕರೆ ಜಮೀನು ನೀಡುವುದಾಗಿ ಜವಳಿ, ಕೃಷಿ ಮಾರುಕಟ್ಟೆ ಸಕ್ಕರೆಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಘೋಷಿಸಿದರು.

ಭಾನುವಾರ ನಗರದಲ್ಲಿ ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳ, ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಯಲ್ಲಿ  ಇತ್ತೀಚಿನ ಬೆಳವಣಿಗೆಗಳ  ಕುರಿತು ರಾಷ್ಟ್ರ ಮಟ್ಟದ ವಿಚಾರ  ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲೇ ಹಸಿದ್ರಾಕ್ಷಿ ಹಾಗೂ ಒಣದ್ರಾಕ್ಷಿ ಉತ್ಪಾದನೆಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಲಿಂಬೆ, ದಾಳಿಂಬೆ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಕಾರಣಕ್ಕೆ ವಿಜಯಪುರ ಜಿಲ್ಲೆಗೆ ತೋಟಗಾರಿಕೆ ಜಿಲ್ಲೆ ಎಂಬ ಕೀರ್ತಿ ಸಂದಿದೆ. ದೇಶದಲ್ಲೇ ಅಧಿಕ ಪ್ರಮಾಣದಲ್ಲಿ ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ದ್ರಾಕ್ಷಿ ಬೆಳೆಯಲಾಗುತ್ತದೆ ಎಂದರು.

ಬಾಲಕೋಟೆ ತೋಟಗಾರಿಕೆ  ವಿಶ್ವವಿದ್ಯಾಲಯ ಇದ್ದರೂ ವಿಜಯಪುರ ಜಿಲ್ಲೆಗೆ ನಿರೀಕ್ಷಿತ ಲಾಭವಾಗಿಲ್ಲ. ಬಾಗಲಕೋಟೆ ಆಚೆಗೂ ವಿಜಯಪುರ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿನ ತೋಟಗಾರಿಕೆ ಬೆಳೆಗಳ ಕುರಿತು ಆದ್ಯತೆ ನೀಡಬೇಕಿದೆ ಎಂದು ಸೂಚಿಸಿದರು.

ದ್ರಾಕ್ಷಿ ಬೆಳಗಾರರ ಶ್ರೇಯೋಭಿವೃದ್ಧಿಗಾಗಿ ಪುಣೆಯಲ್ಲಿ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರ ತೆರೆಯುವಲ್ಲಿ ಕೇಂದ್ರದ ಮಾಜಿ ಸಚಿವರಾದ ಶರದ್ ಪವಾರ್ ಹಾಗೂ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷರಾದ ಸೋಫನ್ ಕಾಂಚನ್ ಅವರ ಪರಿಶ್ರಮ ಸ್ಮರಣಾರ್ಹ ಎಂದರು.


ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್‍ಮಿಸ್ - ಜಿಐ  ಟ್ಯಾಗ್ :

ವಿಶಿಷ್ಟ ಸ್ವಾದದ ಉತ್ಕøಷ್ಟ ದರ್ಜೆಯ ಒಣದ್ರಾಕ್ಷಿ ಉತ್ಪಾದಿಸುವ  ವಿಜಯಪುರದ ಹಸಿರು ದ್ರಾಕ್ಷಿಗೆ ವಿಜಯಪುರ ಗ್ರೀನ್ ಕ್ರಿಸ್‍ಮಿಸ್ ಹೆಸರಿನಲ್ಲಿ ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಪಡೆಯಲು ಸಿದ್ಧತೆ ನಡೆದಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ಡಾ.ಫಕೃದ್ಧಿನ ಅಧ್ಯಕ್ಷತೆಯಲ್ಲಿ ಸಮಿತಿ ಅಗತ್ಯ ದಾಖಲೆ ಹಾಗೂ ಪೂರಕ ಮಾಹಿತಿ ಸಂಗ್ರಹದಲ್ಲಿ ತೊಡಗಿದೆ. ಶೀಘ್ರವೇ ವಿಜಯಪುರ ಹಸಿರು ಒಣದ್ರಾಕ್ಷಿಗೆ ಜಿಐ ಟ್ಯಾಗ್ ಸಿಗಲಿದೆ ಎಂದರು.

ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷರಾದ ಸೋಫನ್ ಕಾಂಚನ್, ಉಪಾಧ್ಯಕ್ಷ ಬಿ.ಎಂ.ಕೋಕರೆ, ಕೈಲಾಸ್ ಭೋಸಲೆ, ಎಸ್.ಡಿ.ಸಾವಂತ, ಮಾರುತಿ ಚವ್ಹಾಣ, ಎಸ್.ಡಿ.ಶಿಖಾಮಣಿ, ಪ್ರಕಾಶ ಗಣಿ, ಕೌಶಿಕ್ ಬ್ಯಾನರ್ಜಿ, ಬಾಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಸೇರಿದಂತೆ ಇತರರು ಉಪಸ್ಥಿತರಿದ್ದರು.



Post a Comment

ನವೀನ ಹಳೆಯದು